ಮೌಂಟ್ಮೌಂಗಾನುಯಿ: ಇಲ್ಲಿನ ಬೇ ಓವಲ್ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಪೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ 42 ಎಸೆತಗಳಲ್ಲಿ ಎರಡು ಸಿಕ್ಸರ್, 3 ಬೌಂಡರಿಗಳ ಮೂಲಕ 40 ರನ್ ಸಿಡಿಸಿ ರನೌಟ್ ಆದರು. ಮಾಯಾಂಕ್ ಅಗರ್ ವಾಲ್ ಕೇವಲ 1 ರನ್ ಗಳಿಗೆ ಫೆವಿಲಿಯನ್ ಹಾದಿ ಹಿಡಿದರು. ನಂತರ ಬಂದ ವಿರಾಟ್ ಕೊಹ್ಲಿ ಕೇವಲ 9 ರನ್ ಗಳಿಸಿ ಹಮೀಸ್ ಬೆನೆಟ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಜೋಡಿ 59 ಎಸೆತಗಳಲ್ಲಿ 50 ರನ್ ಗಳಿಸುವ ಉತ್ತಮ ಪ್ರದರ್ಶನ ನೀಡುತ್ತಿದೆ.
ಇಂದಿನ ಪಂದ್ಯದಲ್ಲಿ ಎರಡೂ ತಂಡಗಳು ತಮ್ಮ ಅಂತಿಮ 11ರಲ್ಲಿ ಬದಲಾವಣೆ ಮಾಡಿಕೊಂಡಿವೆ. ಕೇದಾರ್ ಜಾಧವ್ ಸ್ಥಾನಕ್ಕೆ ಕನ್ನಡಿಗ ಮನೀಶ್ ಪಾಂಡೆ ಆಯ್ಕೆ ಮಾಡಲಾಗಿದ್ದು, ನ್ಯೂಜಿಲೆಂಡ್ ಪಾಳಯದಲ್ಲಿ ಮಾರ್ಕ್ ಚಾಪ್ಮನ್ ಮತ್ತು ಟಾಮ್ ಬ್ಲಂಡೆಲ್ ಅವರ ಬದಲು ನಿಯಮಿತ ನಾಯಕ ಕೇನ್ ವಿಲಿಯಮ್ಸನ್ ಮತ್ತು ಮಿಚೆಲ್ ಸ್ಯಾಂಟ್ನರ್ ಅಂತಿಮ 11ಕ್ಕೆ ಮರಳಿದ್ದಾರೆ.
ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ನ್ಯೂಜಿಲೆಂಡ್ ತಂಡ ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶ ಪಡಿಸಿಕೊಂಡಿದೆ. ಕೊನೆಯ ಪಂದ್ಯ ಗೆದ್ದು ಗೌರವ ಉಳಿಸಿಕೊಳ್ಳುವುದು ಕೊಹ್ಲಿ ಪಡೆಯ ಗುರಿಯಾದರೆ, ನ್ಯೂಜಿಲೆಂಡ್ ತಂಡಕ್ಕೆ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಇರಾದೆಯಲ್ಲಿದೆ
(KANNADA PRABHA)