ಬ್ರಿಸ್ಬೇನ್: ಆಸಿಸ್ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ ಮತ್ತು ಬಿಸಿಸಿಐಗೆ ಕ್ರಿಕೆಟ್ ಆಸ್ಟ್ರೇಲಿಯಾ ಧನ್ಯವಾದ ಅರ್ಪಿಸಿದ್ದು, ಭಾರತೀಯ ತಂಡದ 'ಸ್ಥಿತಿಸ್ಥಾಪಕತ್ವ, ಧೈರ್ಯ ಮತ್ತು ಕೌಶಲ್ಯ'ಕ್ಕೆ ಫುಲ್ ಫಿದಾ ಆಗಿರುವುದಾಗಿ ಹೇಳಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಬಿಸಿಸಿಐಗೆ ಪತ್ರ ಬರೆದಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲೆ ಮತ್ತು ಅಧ್ಯಕ್ಷ ಅರ್ಲ್ ಎಡ್ಡಿಂಗ್ಸ್ ಅವರು, 'ಮಾರಕ ಕೊರೋನಾ ಸಾಂಕ್ರಾಮಿಕ ನಡುವೆ ಭಾರತೀಯ ಆಟಗಾರರು, ಕೋಚಿಂಗ್ ಸಿಬ್ಬಂದಿಗಳು ಮತ್ತು ಬಿಸಿಸಿಐನ ತ್ಯಾಗಗಳಿಂದಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಯಶಸ್ವಿಯಾಗಿದೆ. ಇದಕ್ಕಾಗಿ ಬಿಸಿಸಿಐ ಮತ್ತು ಟೀಂ ಇಂಡಿಯಾಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದೆ.
'ಟೀಂ ಇಂಡಿಯಾ ಈ ಅಭೂತಪೂರ್ವ ಜಯ ಮುಂದಿನ ತಲೆಮಾರಿನವರೆಗೂ ನೆನಪಿನಲ್ಲಿರುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಸೌರವ್ ಗಂಗೂಲಿ ನೇತೃತ್ವದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಹಿಸಿದ್ದ ಪಾತ್ರ ನಿರ್ಣಾಯಕವಾಗಿತ್ತು. ಬಿಸಿಸಿಐನ ಸ್ನೇಹ, ವಿಶ್ವಾಸ ಮತ್ತು ಬದ್ಧತೆಗೆ ಎಂದೆಂದಿಗೂ ನಾವು ಕೃತಜ್ಞರಾಗಿರುತ್ತೇವೆ. ಪ್ರಮುಖವಾಗಿ ಅತ್ಯಂತ ಕಠಿಣ ಬಯೋ ಬಬಲ್ ನಲ್ಲಿ ಉಳಿದುಕೊಂಡು ಇಡೀ ಸರಣಿಯನ್ನು ಯಶಸ್ವಿಗೊಳಿಸಿದ ಭಾರತದ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕಳೆದ ಒಂಬತ್ತು ವಾರಗಳಲ್ಲಿ, ಭಾರತೀಯ ಮತ್ತು ಆಸ್ಟ್ರೇಲಿಯಾದ ಪುರುಷರ ತಂಡಗಳು ಅತ್ಯುತ್ತಮ ಅಂತಾರಾಷ್ಟ್ರೀಯ ಏಕದಿನ ಮತ್ತು ಟ್ವೆಂಟಿ -20 ಸರಣಿಯನ್ನು ಪೂರ್ಣಗೊಳಿಸಿದವು, ನಂತರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಸ್ಪರ್ಧಿಸಿದವು.
ಪ್ರವಾಸವನ್ನು ಯಶಸ್ವಿಗೊಳಿಸಲು ಬಿಸಿಸಿಐ ಸಹಕಾರ ಬಹುಮುಖ್ಯವಾಗಿತ್ತು. ಈ ಸರಣಿಯು ಆರ್ಥಿಕವಾಗಿ ಹೆಣಗಾಡುತ್ತಿದ್ದ ಕ್ರಿಕೆಟ್ ಆಸ್ಟ್ರೇಲಿಯಾಗೆ 300 ಮಿಲಿಯನ್ ಆಸ್ಟ್ರೇಲಿಯಾದ ಡಾಲರ್ ಆದಾಯದೊಂದಿಗೆ ಪ್ರಮುಖ ಉತ್ತೇಜನವನ್ನು ನೀಡಿತು. ಸಿಡ್ನಿ ಟೆಸ್ಟ್ನಲ್ಲಿ ಪ್ರೇಕ್ಷಕರು ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರಿತ್ ಬುಮ್ರಾ ವಿರುದ್ಧದ ಜನಾಂಗೀಯ ನಿಂದನೆ ಮಾಡಿದ್ದ ವಿಪರ್ಯಾಸ. ಇದಕ್ಕೆ ಸಿಎ ವಿಷಾಧ ವ್ಯಕ್ತಪಡಿಸುತ್ತದೆ. ಇಂತಹ ಕೆಲ ಅಹಿತಕರ ವಿವಾದಗಳನ್ನು ಉಭಯ ತಂಡಗಳು ಬದಿಗೊತ್ತಿ, ಕ್ರಿಕೆಟ್ ಮೇಲೆ ಗಮನ ಕೇಂದ್ರೀಕರಿಸಿದವು. ಅನೇಕ ಸಾರ್ವಜನಿಕ ಆರೋಗ್ಯ ಮತ್ತು ವ್ಯವಸ್ಥಾಪನಾ ಸವಾಲುಗಳ ಹೊರತಾಗಿಯೂ, ಬಿಸಿಸಿಐ ಅಂತಾರಾಷ್ಟ್ರೀಯ ಕ್ರೀಡೆಯ ಶ್ರೇಷ್ಠ ರಾಯಭಾರಿಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಸಹಕಾರದ ಮನೋಭಾವದಿಂದ ತೊಡಗಿಸಿಕೊಂಡಿತು ಎಂದು ಹೇಳಿದೆ.
ಅಂತೆಯೇ ಜಸ್ಪ್ರಿತ್ ಬುಮ್ರಾ ಮತ್ತು ಪ್ಯಾಟ್ ಕಮ್ಮಿನ್ಸ್ ಅವರ ಭವ್ಯ ವೇಗದ ಬೌಲಿಂಗ್ನಿಂದ, ಅಜಿಂಕ್ಯ ರಹಾನೆ ಮತ್ತು ಸ್ಟೀವ್ ಸ್ಮಿತ್ರ ಅದ್ಭುತ ಬ್ಯಾಟಿಂಗ್ವರೆಗೆ, ಶುಬ್ಮನ್ ಗಿಲ್ ಮತ್ತು ಕ್ಯಾಮರೂನ್ ಗ್ರೀನ್ರ ರೋಚಕ ಚೊಚ್ಚಲ ಪಂದ್ಯಗಳವರೆಗೂ ಇಡೀ ಸರಣಿ ರಣರೋಚಕತೆಯಿಂದ ಕೂಡಿತ್ತು. ಕಳೆದ ಎರಡು ತಿಂಗಳ ಕ್ರಿಕೆಟ್ ಸಂಪೂರ್ಣವಾಗಿ ಆಕರ್ಷಕವಾಗಿತ್ತು. ಇಡೀ ಸರಣಿಯನ್ನು ಸ್ಮರಣೀಯವಾಗಿಸಿದ್ದಕ್ಕಾಗಿ ಸರ್ಕಾರಗಳು, ಆರೋಗ್ಯ ಅಧಿಕಾರಿಗಳು, ಪ್ರಸಾರ ಮತ್ತು ವಾಣಿಜ್ಯ ಪಾಲುದಾರರು, ಕ್ರಿಕೆಟ್ ಸಂಘಗಳು, ಆಟಗಾರರು, ಪಂದ್ಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ, ನೇರವಾಗಿ ಮತ್ತು ಪರೋಕ್ಷವಾಗಿ ಸರಣಿಯ ಯಶಸ್ಸಿಗಾಗಿ ದುಡಿದ ಎಲ್ಲರಿಗೂ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಪತ್ರದಲ್ಲಿ ಹೇಳಿದೆ.