X Close
X

ದೇವಾಲಯಗಳಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮಕ್ಕೆ ನಿಷೇಧ ಹೇರಲು ಸರ್ಕಾರ ಚಿಂತನೆ


kumkum
ಬೆಂಗಳೂರು: ರಾಜ್ಯದ ಎಲ್ಲಾ ದೇವಾಲಯಗಳಲ್ಲೂ ರಾಸಾಯನಿಕ ಮಿಶ್ರಿತ ಕುಂಕುಮಕ್ಕೆ ನಿಷೇಧ ಹೇರಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಮುಜರಾಯಿ ಇಲಾಖೆಯ ಅಧೀನದಲ್ಲಿ 34,559 ದೇಗುಲಗಳಿದ್ದು, ಇದರಲ್ಲಿ 175 ದೇವಾಲಯಗಳು ಕ್ಲಾಸ್ ಎ (ವಾರ್ಷಿಕ ಆದಾಯ ರೂ.25 ಲಕ್ಷ) 163 ದೇವಾಲಯಗಳು ಕ್ಲಾಸ್ ಬಿ (ವಾರ್ಷಿಕ ಆದಾಯ ರೂ.5 ಲಕ್ಷದಿಂದ 25 ಲಕ್ಷ) 34,221 ಕ್ಲಾಸ್ ಸಿ (ವಾರ್ಷಿಕ ಆದಾಯ ರೂ.5ಲಕ್ಷ) ದೇವಾಲಯಗಳಿವೆ.

ರಾಜ್ಯದಲ್ಲಿರುವ ಹಲವು ದೇವಾಲಯಗಳಲ್ಲಿ ಬಟ್ಟಲಿನಲ್ಲಿ ಕುಂಕುಮವನ್ನು ಇರಿಸಲಾಗಿರುತ್ತದೆ. ಇನ್ನು ಕೆಲ ದೇಗುಲಗಳಲ್ಲಿ ಪ್ರಸಾದದೊಂದಿಗೆ ಪಟ್ಟಣದಲ್ಲಿ ಕುಂಕುಮವನ್ನು ನೀಡಲಾಗುತ್ತಿದೆ. ರಾಸಾಯನಿಕ ಕುಂಕುಮದ ಬಣ್ಣ ಗಾಢವಾಗಿರಲಿದ್ದು, ಚರ್ಮ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನಿರ್ಲಕ್ಷಿಸಿದರೆ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇಂತಹ ಕುಂಕುಮವನ್ನು ಹಚ್ಚಿಕೊಂಡ ಭಾಗದಲ್ಲಿ ಕೆರೆತ, ಸಣ್ಣ ನೀರಿನ ಗುಳ್ಳೆ ಕಾಣಿಸಿಕೊಳ್ಳುತ್ತವೆ. ಇಂತಹ ಕುಂಕುಮಗಳಿಂದ ಜೀವಕಣಗಳೂ ಕೂಡ ನಾಶವಾಗಿ ಕ್ರಮೇಣ ಆ ಭಾಗ ಬೆಳ್ಳಗಾಗುತ್ತವೆ.

ರಾಸಾಯನಿಕ ಮಿಶ್ರಿತ ಕುಂಕುಮದಿಂದ ಸಮಸ್ಯೆಯನ್ನು ಎದುರಿಸುತ್ತಿರುವ ಹಲವಾರು ಭಕ್ತರು ಈ ಬಗ್ಗೆ ಮುಜರಾಯಿ ಇಲಾಖೆಗೆ ಸಾಕಷ್ಟು ಬಾರಿ ದೂರುಗಳನ್ನು ಸಲ್ಲಿಸಿದ್ದಾರೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಜಾರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವರು, ರಾಸಾಯನಿಕ ಮುಕ್ತ ಕುಂಕುಮ ನೀಡುವಂತೆ ನಿಯಮ ಜಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು 3-4 ದಿನಗಳಲ್ಲಿ ಆದೇಶ ಹೊರಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕುಂಕುಮದ ಬಣ್ಣದಿಂದಲೇ ಅದು ರಾಸಾಯನಿಕವೋ, ಅಲ್ಲವೋ ಎಂಬುದನ್ನು ಕಂಡು ಹಿಡಿಯಬಹುದು. ಅನುಮಾನ ಬಂದರೆ ದೇವಾಲಯದ ಕುಂಕುಮವನ್ನು ಆಹಾರ ಸುರಕ್ಷತಾ ಇಲಾಖೆಗೆ ಪರೀಕ್ಷೆಗೆ ಕಳುಹಿಸಬಹುದು. ರಾಸಾಯನಿಕ ಕಂಡು ಬಂದಿದ್ದೇ ಆದರೆ, ತಯಾರಿಕರ ವಿರುದ್ಧ ನೇರವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. (KANNADA PRABHA)