ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ, ಕೆಲವರ ಖಾತೆ ಬದಲಾವಣೆಯಿಂದ ಬಿಜೆಪಿ ಪಾಳಯದಲ್ಲಿ ಒಂದಿಷ್ಟು ಬದಲಾವಣೆಗಳು ಆಗುತ್ತಿದ್ದರೆ, ಇತ್ತ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕುತೂಹಲ ಕೆರಳಿಸಿದ್ದಾರೆ. ಆದರೂ ಇಬ್ಬರೂ ರಾಜಕೀಯ ವಿಚಾರಗಳನ್ನು ಚರ್ಚಿಸಲಾಗಿದೆ ಎಂಬುದನ್ನು ಮಾತ್ರ ತಳ್ಳಿಹಾಕಿದ್ದಾರೆ.
ಖಾತೆ ಪುನರ್ ಹಂಚಿಕೆಯಲ್ಲಿ ಗೃಹ ಸಚಿವರಾಗಿರುವ ಬಸವರಾಜ ಬೊಮ್ಮಾಯಿಗೆ ಈ ಹಿಂದೆ ಇದ್ದ ಗುಪ್ತಚರ ಇಲಾಖೆ ಕೈಬಿಟ್ಟು ಹೋಗಿದೆ. ಇದೇ ಸಂದರ್ಭದಲ್ಲಿ ಆರ್.ಟಿ.ನಗರದ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ, ಬೊಮ್ಮಾಯಿ ಜೊತೆ ಸುಮಾರು ಅರ್ಧಗಂಟೆಗೂ ಹೆಚ್ಚಿನ ಕಾಲ ಚರ್ಚೆ ನಡೆಸಿದರು.
ಬಸವರಾಜ್ ಬೊಮ್ಮಾಯಿ ಭೇಟಿ ಬಳಿಕ ಕುಮಾರಸ್ವಾಮಿ ಮಾತನಾಡಿ, ರಾಜಕೀಯ ಬೆಳವಣಿಗೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ರಾಜಕೀಯ ವಿಚಾರದ ಚರ್ಚೆಯಾಗಿದೆ ಎಂಬ ಸುದ್ದಿಯನ್ನು ಅಲ್ಲಗಳೆದರು. ನಮ್ಮದು ಹಳೆಯ ಸ್ನೇಹವಾಗಿದ್ದು, ಪಕ್ಷ ಬೇರೆಯಾದರೂ ಈವರೆಗೂ ಬೊಮ್ಮಾಯಿ ನಾವು ಒಂದೇ ಕುಟುಂಬದರಂತೆ ಇದ್ದೇವೆ. ತಂದೆ ದೇವೇಗೌಡರು ಹಾಗೂ ಎಸ್.ಆರ್.ಬೊಮ್ಮಾಯಿ ಸ್ನೇಹಿತರಾಗಿದ್ದವರು. ಹೀಗಾಗಿ ಬಸವರಾಜ ಬೊಮ್ಮಾಯಿ ತಂದೆಯವರ ಕಾಲದಿಂದಲೂ ಅವರ ಕುಟುಂಬದ ಜೊತೆ ಸ್ನೇಹವಿದೆ ಎಂದರು.
ಪಕ್ಷಗಳ ರಾಜಕೀಯ ಚರ್ಚೆ ಆಗಿಲ್ಲ ಎಂಬುದನ್ನು ಒತ್ತಿ ಹೇಳಿದ ಕುಮಾರಸ್ವಾಮಿ ಬೊಮ್ಮಾಯಿಯನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೆ ಮನವೊಲಿಸಲೂ ಬಂದಿಲ್ಲ. ಮತಕ್ಷೇತ್ರದ ಕೆಲ ನೇಮಕಾತಿ ವಿಚಾರದ ಬಗ್ಗೆ ಚರ್ಚಿಸಿದ್ದೇವೆ ಅಷ್ಟೇ. ಅದನ್ನು ಬಿಟ್ಟು ಬೇರೆಯಾವುದೇ ಚರ್ಚೆ ಆಗಿಲ್ಲ ಎಂದರು.
ಬಸವರಾಜ ಬೊಮ್ಮಾಯಿ ಮಾತನಾಡಿ, ಯಾವುದೇ ರಾಜಕೀಯ ವಿಚಾರ ಚರ್ಚೆ ಆಗಿಲ್ಲ. ಕುಮಾರಸ್ವಾಮಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಕುಮಾರಸ್ವಾಮಿ ನಾನು ತುಂಬಾ ಹಳೇ ಸ್ನೇಹಿತರುನನ್ನ ತಂದೆ ಕಾಲದಿಂದಲೇ ದೇವೇಗೌಡರ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಇದೆ. ನಿನ್ನೆಯೇ ಅವರು ಭೇಟಿ ಮಾಡಬೇಕೆಂದಿದ್ದರು. ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆಯಾಗಿದೆಯೇ ಹೊರತು ಯಾವುದೇ ರಾಜಕೀಯ ಚರ್ಚಿಸಿಲ್ಲ ಎಂದರು.
(KANNADA PRABHA)