ಮುಂಬೈ: ಐತಿಹಾಸಿಕ ಟೆಸ್ಟ್ ಸರಣಿ ಜಯದ ಬಳಿಕ ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ಮರಳಿದ್ದು, ಅಧಿಕಾರಿಗಳ ಅದೇಶದಂತೆ ಅವರನ್ನು 7 ದಿನ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಹೌದು.. ಗಬ್ಬಾ ಟೆಸ್ಟ್ ಜಯದ ಬಳಿಕ ಟೀಂ ಇಂಡಿಯಾ ನಾಯಕ ಅಜಿಂಕ್ಯಾ ರಹಾನೆ, ಉಪ ನಾಯಕ ರೋಹಿತ್ ಶರ್ಮಾ, ಪ್ರಧಾನ ಕೋಚ್ ರವಿಶಾಸ್ತ್ರಿ, ಉದಯೋನ್ಮುಖ ಆಟಗಾರ ಶಾರ್ದೂಲ್ ಠಾಕೂರ್ ಮತ್ತು ಪೃಥ್ವಿಶಾ ಇಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಆಟಗಾರರನ್ನು ಸ್ವಾಗತಿಸಿದ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ನಾಯಕ ರಹಾನೆ ಅವರಿಂದ ಕೇಕ್ ಕತ್ತರಿಸುವ ಮೂಲಕ ಟೆಸ್ಟ್ ಸರಣಿ ಜಯದ ಸಂಭ್ರಮಾಚರಣೆ ಮಾಡಿದರು.
ಬಳಿಕ ಎಲ್ಲ ಐದೂ ಆಟಗಾರರನ್ನು ವಿಮಾನ ನಿಲ್ದಾಣದಲ್ಲಿಯೇ ವೈದ್ಯಾಧಿಕಾರಿಗಳು ಆರ್ ಟಿಪಿಸಿಆರ್ ಕೋವಿಡ್ ಪರೀಕ್ಷೆಗೆ ಒಳಪಡಿಸಿದರು. ಎಲ್ಲರಿಗೂ ಮುಂದಿನ 7 ದಿನಗಳ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸಲಹೆ ನೀಡಲಾಗಿದೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್ ಹೇಳಿದ್ದಾರೆ.
(KANNADA PRABHA)