ಬೆಂಗಳೂರು: ಕಾಲೇಜು ಮಟ್ಟದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಸುಮಾರು 7 ಸಾವಿರ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಉನ್ನತ ಶಿಕ್ಷಣದ ಪರೀಕ್ಷೆ ಕುರಿತಂತೆ ಜೂನ್ ಮೊದಲ ವಾರದಲ್ಲಿ ನಿರ್ಧಾರ ಪ್ರಕಟಿಸಲಾಗುವುದು, ಆದ್ದರಿಂದ ಈ ಮಾಸಾಂತ್ಯದೊಳಗೆ ಆನ್ ಲೈನ್ ತರಗತಿಗಳ ತಮ್ಮ ಭಾಗವನ್ನು ಮುಕ್ತಾಯಗೊಳಿಸುವಂತೆ ಉಪಮುಖ್ಯಮಂತ್ರಿ ಡಾ. ಅಶ್ವತ್ನಾರಾಯಣ, ಕಾಲೇಜುಗಳ ಮುಖ್ಯಸ್ಥರು ಹಾಗೂ ಕುಲಪತಿಗಳಿಗೆ ನಿರ್ದೇಶಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಎನ್ ಎಸ್ ಯುಐ ಸಂಘಟನೆಯಡಿ ಸಹಿ ಮಾಡಿರುವ ವಿದ್ಯಾರ್ಥಿಗಳು, ಪ್ರಥಮ ಹಾಗೂ ದ್ವಿತೀಯ ಪದವಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ಬಡ್ತಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಆದಾಗ್ಯೂ, ಅಂತಿಮ ತರಗತಿ ವಿದ್ಯಾರ್ಥಿಗಳಲ್ಲಿಯೂ ಭೀತಿ ಎದುರಾಗಿದೆ. ಶೇ. 70 ರಷ್ಟು ಭಾಗ ಪೂರ್ಣಗೊಂಡಿಲ್ಲ.ಆನ್ ಲೈನ್ ತರಗತಿ ಅರ್ಥವಾಗುತ್ತಿಲ್ಲ,ಇದು ನಮ್ಮ ಅಂತಿಮ ಸೆಮಿಸ್ಟರ್ ಆಗಿದ್ದು,ಒಟ್ಟು ಅಂಕದ ಮೇಲೆ ಪರಿಣಾಮ ಬೀರಲಿದೆ ಎಂದು ಕೆಲ ವಿದ್ಯಾರ್ಥಿಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ವಾಟ್ಸಾಪ್ ನಲ್ಲಿ ನೋಟ್ಸ್ ಕಳುಹಿಸಲಾಗುತ್ತದೆ. ಅದನ್ನು ನಮ್ಮಗೆ ತಕ್ಕಂತೆ ಕಲಿಯಬೇಕಾಗುತ್ತದೆ ಎಂದು ಮತ್ತೋರ್ವ ವಿದ್ಯಾರ್ಥಿ ಹೇಳಿದರು.
ಆನ್ ಲೈನ್ ಪರೀಕ್ಷೆಗಳು ಸರಿಯಾದ ಸಂಪರ್ಕತೆ ಹಾಗೂ ಮೂಲಸೌಕರ್ಯವಿಲ್ಲದ ದೀನದಲಿತ ವಿದ್ಯಾರ್ಥಿಗಳನ್ನು ಶೋಷಣೆ ಮಾಡುವಂತಿದೆ ಎಂದು ಕೆಲ ವಿದ್ಯಾರ್ಥಿಗಳು ನೋವು ತೋಡಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಉಪಮುಖ್ಯಮಂತ್ರಿ ನಿರಾಕರಿಸಿದ್ದಾರೆ.
(KANNADA PRABHA)