Bengaluru:ಬೆಂಗಳೂರು: ಕಂಪ್ಲಿ ಶಾಸಕ ಜೆ.ಗಣೇಶ್ ವಿರುದ್ಧ ಕೊಲೆ ಯತ್ನ ಕೇಸು ದಾಖಲಿಸಿಕೊಡಿರುವ ರಾಮನಗರ ಪೋಲೀಸರು, ಅವರನ್ನು ಬಂಧಿಸಲು ವಿಧಾನಸೌಧದಲ್ಲಿ ಕಾಯುತ್ತಿದ್ದರು.. ಬಜೆಟ್ ಅಧಿವೇಶನ ಆರಂಭವಾಗಿರುವ ಹಿನ್ನೆಲೆಯಲ್ಲಿ ಗಣೇಶ್ ಅಧಿವೇಶನಕ್ಕೆ ಆಗಮಿಸುತ್ತಾರೆ, ಆ ವೇಳೆ ಬಂಧಿಸಲು ಪೊಲೀಸರು ಸಿದ್ದತೆ ನಡೆಸಿದ್ದರು. ವಿಧಾನಸಭೆ ಬಜೆಟ್ ಅಧಿವೇಶನಕ್ಕೆ ಆಗಮಿಸುವ ಶಾಸಕ ಗಣೇಶ್ರನ್ನು ಬಂಧಿಸಲು ಪೊಲೀಸರು ಬುಧವಾರ ಬೆಳಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರ ಅನುಮತಿ ಕೋರಿದ್ದಾರೆ. ರಾಜ್ಯಪಾಲರು ಬಜೆಟ್ ಅಧಿವೇಶನದ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತ ಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿತ್ತು, ಸುಮಾರು 200 ಪೊಲೀಸರನ್ನು ನಿಯೋಜಿಸಲಾಗಿತ್ತು. ಜನವರಿ 19ರಂದು ಬೆಂಗಳೂರು ಹೊರವಲಯದ ಈಗಲ್ ಟನ್ ರೆಸಾರ್ಟ್ ನಲ್ಲಿ ನಡೆದ ಶಾಸಕರ ಮಾರಾಮಾರಿ ಪ್ರಕರಣದಲ್ಲಿ ಆನಂದ್ ಸಿಂಗ್ ಗೆ ಗಣೇಶ್ ಹಿಗ್ಗಾಮುಗ್ಗಾ ಥಳಿಸಿದ್ದರು, ಹೀಗಾಗಿ ಶಾಸಕ ಗಣೇಶ್ ವಿರುದ್ಧ ರಾಮನಗರ ಪೊಲೀಸರು ಕೊಲೆಯತ್ನ ಸೇರಿದಂತೆ ವಿವಿದ ಸೆಕ್ಷನ್ ಗಳ ಅಡಿ ದೂರು ದಾಖಲಿಸಿಕೊಂಡಿದ್ದರು. ಬಜೆಟ್ ಅಧಿವೇಶನದ ಮೊದಲ ದಿನದಂದು ಶಾಸಕ ಗಣೇಶ್ ಸದನಕ್ಕೆ ಹಾಜರಾಗುವ ಸಾಧ್ಯತೆಯಿದೆ ಎಂದು ನಂಬಿದ್ದ ಪೊಲೀಸರು ಮುಫ್ತಿಯಲ್ಲಿ ಗಣೇಶ್ ಗಾಗಿ ಕಾಯುತ್ತಿದ್ದರು, ಪ್ರಕರಣ ದಾಖಲಾದ ದಿನದಿಂದ ಗಣೇಶ್ ನಾಪತ್ತೆಯಾಗಿದ್ದರು.