'ಚೌಕೀಧಾರ್ ಚೋರ್ ಹೇ' ಘೋಷಣೆಗೆ ತಳಕು: ಸುಪ್ರೀಂ ಕೋರ್ಟ್ ಕ್ಷಮೆ ಕೇಳಿದ ರಾಹುಲ್ ಗಾಂಧಿ
Bengaluru:ನವದೆಹಲಿ:ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ನಲ್ಲಿ ಕ್ಷಮೆಯಾಚಿಸಿದ್ದಾರೆ.
ಚೌಕೀಧಾರ್ ಚೋರ್ ಹೇ ಘೋಷಣೆಗೆ ಸುಪ್ರೀಂಕೋರ್ಟ್ ತಳಕು ಹಾಕಿದ್ದಕ್ಕೆ ತಪ್ಪನ್ನು ಒಪ್ಪಿಕೊಳ್ಳುವಂತೆ ಸುಪ್ರೀಂಕೋರ್ಟ್ ಹೇಳಿದ ನಂತರ ಬೇರೆ ವಿಧಿ ಇಲ್ಲದೆ ರಾಹುಲ್ ಗಾಂಧಿ ಮತ್ತೊಮ್ಮೆ ಸುಪ್ರೀಂಕೋರ್ಟ್ ಬಳಿ ಕ್ಷಮೆ ಕೇಳಿದ್ದಾರೆ. ರಾಹುಲ್ ಗಾಂಧಿ ಅಫಿಡವಿಟ್ ನಲ್ಲಿ ಮೂರು ದೋಷಗಳಿರುವುದಾಗಿ ರಾಹುಲ್ ಗಾಂಧಿ ಪರ ವಕೀಲ ಎಎಂ ಸಿಂಘ್ವಿ ಕೂಡಾ ಒಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿ ಕ್ಷಮೆಯಾಚಿಸುವುದರೊಂದಿಗೆ ಹೊಸ ಅಫಿಡವಿಟ್ ಸಲ್ಲಿಸುವುದಾಗಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದು, ಮತ್ತೊಂದು ಅಫಿಡವಿಟ್ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಿದೆ. ವಿಚಾರಣೆಯನ್ನು ಮೇ 6 ಕ್ಕೆ ನ್ಯಾಯಾಲಯ ಮುಂದೂಡಿದೆ.
ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸಲ್ಲಿಸಿದ್ದ ನ್ಯಾಯಾಂಗ ನಿಂಧನೆ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರಿದ್ದ ಪೀಠ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ತಮ್ಮಿಂದ ತಪ್ಪಾಗಿರುವುದಾಗಿ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದು, ಸುಪ್ರೀಂಕೋರ್ಟ್ ನಲ್ಲಿ ಕ್ಷಮೆ ಯಾಚಿಸಿದ್ದಾರೆ. ವಿಚಾರಣೆಯ ಆರಂಭದಲ್ಲಿ ಕ್ಷಮೆ ಯಾಚಿಸುವುದಕ್ಕೆ 22 ಪುಟಗಳ ಅಫಿಡವಿಟ್ ಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಬ್ರಾಕೆಟ್ಸ್ ನಲ್ಲಿ ಕ್ಷಮೆ ಪದ ಹಾಕಿರುವುದಕ್ಕೆ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ ಸುಪ್ರೀಂಕೋರ್ಟ್ , ಕ್ಷಮೆಯಾಚಿಸಲು 22 ಪುಟಗಳ ಅಫಿಡವಿಟ್ ಬೇಕಿತ್ತಾ ಎಂದು ಪ್ರಶ್ನಿಸಿತು ನೀವು ತಪ್ಪು ಮಾಡಿದ್ದರೆ ಒಪ್ಪಿಕೊಳ್ಳಿ ಎಂದು ರಾಹುಲ್ ಪರ ವಕೀಲರಿಗೆ ನ್ಯಾಯಾಲಯ ತಿಳಿಸಿತು. ನಂತರ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ನಲ್ಲಿ ತನ್ನಿಂದ ತಪ್ಪಾಗಿರುವುದಾಗಿ ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.