X Close
X

ಆಟದಲ್ಲಿ ತಂತ್ರಗಾರಿಕೆ-ನಿಖರತೆ ಸ್ಪಷ್ಟವಾಗಿರಬೇಕು: ಮಯಾಂಕ್ ಅಗರ್ವಾಲ್


mayank-agarwal

ಚೆನ್ನೈ: ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ಸತತ ಟೆಸ್ಟ್‌ ಸರಣಿಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಕರ್ನಾಟಕದ ಮಯಾಂಕ್ ಅಗರ್ವಾಲ್ ಅವರು ಗಾಯಾಳು ಶಿಖರ್ ಧವನ್ ಅವರ ಸ್ಥಾಾನಕ್ಕೆ ವೆಸ್ಟ್‌ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಸ್ಥಾನ ಪಡೆದುಕೊಂಡಿದ್ದಾರೆ.

ದೀರ್ಘ ಅವಧಿ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಭೀತುಪಡಿಸಿದ ಕನ್ನಡಿಗ ಮಯಾಂಕ್ ನಾಳೆಯಿಂದ ಸೀಮಿತ ಓವರ್‌ಗಳ ಮಾದರಿಯಲ್ಲಿ ತಮ್ಮ ಅದೃಷ್ಠ ಪರೀಕ್ಷೆಗೆ ಒಳಗಾಗಲಿದ್ದಾರೆ.

ಮಯಾಂಕ್ ಅಗರ್ವಾಲ್ ಇದುವರೆಗೂ ಆಡಿರುವ 9 ಟೆಸ್ಟ್‌ ಪಂದ್ಯಗಳಲ್ಲಿ ಎರಡು ದ್ವಿಶತಕ ಸೇರಿದಂತೆ ಮೂರು ಶತಕಗಳು ಹಾಗೂ ಹಲವು ಅರ್ಧಶತಕಗಳನ್ನು ಸಿಡಿಸಿದ್ದಾರೆ. 67.07ರ ಸರಾಸರಿಯಲ್ಲಿ 872 ರನ್ ಗಳಿಸಿದ್ದಾರೆ. ಏಕದಿನ ಸರಣಿ ನಿಮಿತ್ತಾ ಅವರು, ಟೀಮ್ ಇಂಡಿಯಾ ಸ್ಪಿನ್ನರ್ ಚಾಹಲ್ ನಡೆಸಿದ ವೀಡಿಯೋ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ದೇಶೀಯ ಕ್ರಿಕೆಟ್‌ನಲ್ಲಿ ಈ ಎಲ್ಲ ಮಾದರಿಗಳಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಬೇರೆ-ಬೇರೆ ಮಾದರಿಯಲ್ಲಿ ಆಡುವುದು ಮನಸ್ಥಿತಿಗೆ ಬಿಟ್ಟ ವಿಚಾರ. ಆಟದ ಬಗ್ಗೆ ತಂತ್ರಗಾರಿಕೆ ಹಾಗೂ ನಿಖರತೆ ಇದ್ದರೆ, ಯಾವುದೇ ಮಾದರಿಯಲ್ಲೂ ಹೊಂದಾಣಿಕೆ ಸಾಧಿಸಬಹುದು,’’ ಎಂದು ಹೇಳಿದರು.

‘ನಾನು ಎಲ್ಲಿ ಆಡಿದರೂ. ತಂಡದ ಗೆಲುವಿಗೆ ಏನು ಕೊಡುಗೆ ನೀಡಬಹುದು ಎಂಬ ಬಗ್ಗೆ ಸದಾಯೋಚಿಸುತ್ತಿರುತ್ತೇನೆ. ಬ್ಯಾಟ್ ಮೂಲಕ ರನ್ ಗಳಿಸಲು ಸಾಧ್ಯವಾಗದೇ ಇದ್ದರೂ ಫೀಲ್ಡಿಂಗ್ ನಲ್ಲಿ ತಂಡಕ್ಕೆ ನೆರವಾಗಲು ಪ್ರಯತ್ನಿಸುತ್ತೇನೆ’ ಎಂದರು.

‘ಪ್ರತಿ ಪಂದ್ಯ ಹಾಗೂ ಸರಣಿಯಲ್ಲೂ ತಂಡವನ್ನು ಗೆಲ್ಲಿಸುವ ಮನೋಭಾವ ಹೊಂದಿರುತ್ತೇನೆ. ಯಾವಾಗ ನಮ್ಮ ಮನಸು ಈ ರೀತಿ ನಿಲುವು ಇರುತ್ತದೋ ಆಗ ಸಾಮಾನ್ಯವಾಗಿ ನಮ್ಮ ಮನಸ್ಥಿತಿ ಉತ್ತಮವಾಗಿರುತ್ತದೆ. ಅದರಲ್ಲಿ ನಾವು ಶೇ. 100ರಷ್ಟು ಫಲಿತಾಂಶ ಪಡೆಯುತ್ತೇವೆ ಎಂದು ನಿಖರವಾಗಿ ಹೇಳಲಾಗದು. ಆದರೆ, ಉತ್ತಮವಾಗಿ ಆಡುವ ಅವಕಾಶವನ್ನು ನಾವೇ ಪಡೆದುಕೊಳ್ಳಬೇಕು’ ಎಂದು ಮಯಾಂಕ್ ಅಗರ್ವಾಲ್ ತಿಳಿಸಿದ್ದಾರೆ.

(KANNADPRABHA)